Thursday, October 06, 2016

ದೇವಸ್ಥಾನಗಳಲ್ಲಿ ಪೂಜಾಕೈಂಕರ್ಯ

ಮೋಕ್ಷ ಪಡೆಯಲು ಎಲ್ಲರಿಗೂ ಹೇಗೆ ಹಕ್ಕಿದೆಯೋ ಹಾಗೆ ಆಗಮಶಾಸ್ತ್ರ ಅಭ್ಯಸಿಸಿದರೆ ಯಾವುದೇ ಜಾತಿಯವರೂ ಪೂಜಾ ಕೈಂಕರ್ಯ ದಲ್ಲಿ ತೊಡಗಬಹುದೆಂದೂ ಅದನ್ನು ಆಚರಣೆಗೂ ತಂದವರು ರಾಮಾನುಜಾಚಾರ್ಯರು. ಮೇಲುಕೋಟೆ, ತಿರುಪತಿ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಈ ಮಾದರಿ ಕಾಣಬಹುದು.

Thursday, March 21, 2013

ವಿಶ್ವ ಸೃಷ್ಟಿಯಲಿ ದೇವರು, ಧರ್ಮ

ಪ್ರಾಚೀನ ಕಾಲದಿಂದಲೂ ಮಾನವನಿಗೆ ಒಳಿತು ಕೆಡುಕಿನ ಪ್ರಶ್ನೆಯೆ ಕಾಡಿದ ಸಂದರ್ಭದಲ್ಲೆಲ್ಲಾ ಅವನ ಧರ್ಮ ಕರ್ಮಗಳೇ ಉತ್ತರಿಸಿವೆ. ಧರ್ಮವು ನೆಮ್ಮದಿಗೆ ದಾರಿ ಕಾಣಿಸಿದರೆ, ಕರ್ಮಕೈಂಕರ್ಯದಲ್ಲಿ ಜೀವಿತ ಸಾರ್ಥಕ್ಯ ಕಂಡಿದೆ. ಸತ್ಕರ್ಮಫಲಗಳ ಮೂಲವೇ ಧರ್ಮ. ಧರ್ಮವು ದ್ವಿಮುಖಿ. ಒಂದು ಅಂತರ್ಮುಖಿ. ಇನ್ನೊಂದು ಬಹಿರ್ಮುಖಿ. ಅಂತರ್ಮುಖಿಗೆ ಜೀವಧರ್ಮ. ಬಹಿರ್ಮುಖಿಗೆ ಮಾನವ ಧರ್ಮ. ಇವೆರಡೂ ಮಾನವನಿಗೆ ಆಂತರಿಕ ಶಕ್ತಿ ನೀಡುವುದು;ಜೀವನೋತ್ಸಾಹ ತುಂಬುವುದು. ಉತ್ತಮ ಬದುಕಿಗೆ ದಾರಿ ತೋರುವುದು. ಭವಿಷ್ಯಕ್ಕೆ ಹೊಸಬೆಳಕು ಕಾಣಿಸುವುದು. ಆ ಬೆಳಕೇ ಜೀವಜಗತ್ತಿಗೆ ವ್ಯಾಪಕವಾದ ಅರ್ಥವನ್ನೂ ಕಲ್ಪಿಸಿಕೊಟ್ಟಿವೆ. ಅಲ್ಲದೇ ಧಾರ್ಮಿಕತೆಯಲ್ಲಿ ದೇವರನ್ನು ಅರಿಯುವಂತೆ ಮಾಡಿದೆ. ಆದಕಾರಣ, ಮನುಷ್ಯನು ಧರ್ಮಕ್ಕೆ ವಿಶಿಷ್ಟ ಅರ್ಥವನ್ನೇ ಕೊಟ್ಟಿದ್ದಾನೆ.

ಒಳಗೂ ಹೊರಗೂ ಧರ್ಮ ಕರ್ಮದ ಅಂಜಿಕೆ ಇಲ್ಲದಿರುವ ಮನುಷ್ಯನ ಬದುಕಿನಲ್ಲಿ ನಿತ್ಯ ಕೋಲಾಹಲವೇ. ಮನುಷ್ಯ ಧರ್ಮವನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾನೆ...! ಎಷ್ಟೋ ವೇಳೆ ಧರ್ಮದ ಹೆಸರಿನಲ್ಲಿ ಮನಸೋ ಇಚ್ಛೆ ನಡೆದುಕೊಳ್ಳುವುದೂ ಅವನ ಬದುಕಿನ ಕರ್ಮವೇ;ವೈಚಿತ್ರ್ಯವೇ ಆಗಿದೆ.

ಜನಾಂಗ ಜನಾಂಗಗಳಲ್ಲಿ ಮತೀಯಧರ್ಮ, ರಾಜಕಾರಣದಲ್ಲಿ ರಾಜಕೀಯಧರ್ಮ,

ಕೋಮುವಾದದಲ್ಲಿ ಮತೀಯಧರ್ಮ. ಬ್ರಾಹ್ಮಣ, ವೀರಶೈವ, ಜೈನ, ಭೌದ್ಧ, ಮುಸ್ಲಿಂ, ಸಿಖ್ ಜನಾಂಗೀಯ ಪದ್ಧತಿಯಲ್ಲಿ ಧರ್ಮವಿದೆ. ಮತೀಯರೆಂಬುದು ಧರ್ಮೀಯರಾಗಿಯೂ, ಧಾರ್ಮಿಕತೆ ಎಂಬುದು ಜಾತಿಯತೆಯಾಗಿಯೂ ಕಾಡುವುದಿದೆ. ಧರ್ಮವು ಜೀವಧರ್ಮವಾದಗಲಷ್ಟೇ ಮನುಷ್ಯ ಮನುಷ್ಯನಾಗುತ್ತಾನೆ. ಮಾನವೀಯತೆಯಲ್ಲಿ ದೈವಿಕತೆ ಮೆರೆಯುತ್ತದೆ.

ಅಂದು ಧರ್ಮ-ಕರ್ಮದ ಅಂಜಿಕೆ ಎಂದರೆ ದೇವರ-ಪಾಪದ ಅಂಜಿಕೆ ಯಾಗಿತ್ತು. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಎಲ್ಲ ವೈಜ್ಞಾನಿಕವೆನಿಸಿದರೇನು! ದೈವಿಕ ಧಾರ್ಮಿಕ ನಂಬಿಕೆಗಳ ಪ್ರಭಾವವಿದ್ದೇ ಇದೆ. ಅಣು ರೇಣು ತೃಣ ಕಾಷ್ಟಗಳಲ್ಲಿ ದೇವಕಣ- ದೇವರ ಅಂಶವಿದೆ ಎಂಬುದು ವೈಜ್ಞಾನಿಕರನ್ನೂ ಬೆರಗು ಗೊಳಿಸಿ ಬಿಟ್ಟಿದೆಯಲ್ಲ...ಆಧ್ಯಾತ್ಮಿಕತೆಯ ಅನುಭಾವದಲ್ಲಿ ಭಗವದ್ಭಕ್ತಿ ಎಂಬುದು ಅಂತರಂಗದ ಶೋಧನೆ. ಅದು ಹೊರಗಿನಿಂದ ಅಲ್ಲ, ನಮ್ಮೊಳಗಿನಿಂದಲೆ ಬರಬೇಕು. ಅದು ತಾಯಿ ಪ್ರೇಮದಿಂದ ಆರಂಭವಾಗಿ ನಮ್ಮ ಕೊನೆಯುಸಿರಿನಲ್ಲಿ ವಿಶ್ವಪ್ರೇಮದಿಂದ ಕೊನೆಗೊಳ್ಳುವುದೆಂಬುದನ್ನೂ ಬಲ್ಲವರೇ ಬಲ್ಲರು! ಅದನ್ನರಿಯದ ಮೌಢ್ಯವೂ ಹೆಚ್ಚುತ್ತಿದೆ. '
ಪಾಪ ಪುಣ್ಯಗಳೆಲ್ಲ ಪುರಾಣಗಳಲ್ಲಿ, ದುಡ್ಡಿದ್ದರೇನೆ ಈ ಪ್ರಪಂಚದಲ್ಲಿ ಎಲ್ಲವೂ..' ಎಂಬ ಹುಂಬತನವೂ ಇದೆ! ಹೀಗಾಗಿ ಧರ್ಮವೆಂದರೇನೆ ಜನಸಾಮಾನ್ಯರಲ್ಲಿ ಎಲ್ಲಿಲ್ಲದ ಗೊಂದಲ. ದೇವರು ಇಲ್ಲ ಎನ್ನುವ ಗುಂಪು ಎಲ್ಲಿಲ್ಲ...? ಅದು ಹೇಗೆ ಬೆಳೆದರೂ ಎಂದಿಗೂ ಅಲ್ಪಸಂಖ್ಯೆಯಲ್ಲಿರುತ್ತದೆ. ದೇವರಿಲ್ಲ ಎನ್ನುವವರೂ ದೈವಿಕತೆ ಬಗ್ಗೆ ಮಾತಾಡುವವರಿದ್ದಾರೆ! ದೇವರಿಲ್ಲದ ಧಾರ್ಮಿಕತೆ ಇಲ್ಲದ ದೈವಿಕತೆ ಉಂಟೇ...? ಹಾಗೂ ಮಾನವೀಯತೆ ಇಲ್ಲದ ಧಾರ್ಮಿಕತೆ ಇದೆಯೇ...? ಧರ್ಮ ಎಂಬುದು ಕೇವಲ ಜಾತಿ ಮತೀಯ ಸಂಪ್ರದಾಯಗಳಿಗಷ್ಟೇ ಸೀಮಿತವೇ....? ಅಷ್ಟಕ್ಕೂ ಸಂಪ್ರದಾಯಗಳೆಂದರೆ ಆಯಾ ಜನಾಂಗೀಯ ಜಾತಿ ಪದ್ಧತಿಗಳಲ್ಲಿರುವ ಆಚಾರ ವಿಚಾರಗಳು. ಅವು ಕೆಲವೆಡೆ ವಿಚಿತ್ರವೆನಿಸಿದರೂ ಜೀವಧರ್ಮ ವೆಂಬುದು ಎಲ್ಲರಿಗೂ ಒಂದೇ ಅಲ್ಲವೇ...?
ಧರ್ಮ ಎಂಬ ಪದಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣುವಷ್ಟು ಬೇರೆ ಬೇರೆ ಅರ್ಥಗಳನ್ನು ಇನ್ಯಾವ ಪದಕ್ಕೂ ಕಾಣಲಾರೆವು. ಭಾರತ ವಿಚಿತ್ರ ವಿರೋಧಾಭಾಸಗಳ ದೇಶವೆನ್ನುತ್ತಾರೆ. ಆದರೇನು! ಭಾರತದ ಆತ್ಮವೇ ಆಧ್ಯಾತ್ಮ. ಮಾನವನ ಜೀವಧರ್ಮವನ್ನಲ್ಲದೇ ಅದು ತಿಳಿಸದಿರುವ ವಿಚಾರಗಳಿಲ್ಲ. ಭಕ್ತಿ ಜ್ಞಾನ-ವೈರಾಗ್ಯಗಳಿಲ್ಲ, ನಡೆನುಡಿಗಳಿಲ್ಲ. ಹಾಗೆನೋಡಿದರೆ ಆತ್ಮ ಇಲ್ಲ ಎನ್ನುವ ಪಂಥದವರಿಗೂ ಆಧ್ಯಾತ್ಮವು ಪರಮಾಪ್ತವೆನಿಸಿದೆಯಲ್ಲ...

ತಿರುಪತಿ ತಿರುಮಲೆ ಪುಣ್ಯಕ್ಷೇತ್ರ
ವೇದೋಪನಿಷತ್ತು,ಮತ್ತು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನಲ್ಲದೇ ಅನೇಕ ಸ್ಥಳ ಪುರಾಣ ಕಥೆಗಳನ್ನೇ ನೀಡಿದಂತಹ ಪುಣ್ಯಭೂಮಿ ನಮ್ಮದು. ಪುಣ್ಯಕ್ಷೇತ್ರವೊಂದರ ಕಥೆ ಎಂದರೆ ಭಕ್ತರಿಗೆ ಭಾವುಕರಿಗಷ್ಟೇ, ಅವುಗಳಲ್ಲಿ ಎಲ್ಲಕಾಲಕ್ಕೂ ಪ್ರಸ್ತುತವೆನಿಸುವ ಜೀವನ ಮೌಲ್ಯಗಳು ಇರುವುದು ವಿರಳವೇ, ಅದೊಂದು ಕೋಮಿನ-ಧರ್ಮೀಯರಿಗೆ ಸೀಮಿತವೆಂಬ ಭಾವನೆಯೇ. ಆದರೇನು! ಶತಶತಮಾನಗಳಿಂದ ಎಲ್ಲ ಜನಾಂಗಗಳ ಕೋಮುಗಳ ಧರ್ಮಿಯರನ್ನು ಆಕರ್ಷಿಸುತ್ತಿದೆ ತಿರುಪತಿ ತಿರುಮಲ ಪುಣ್ಯಕ್ಷೇತ್ರ!

ತಿರುಮಲೇಶನ ಸತ್ವಗುಣದ ಹಿರಿಮೆ, ವಿಶ್ವಕಲ್ಯಾಣ ಕಥೆಗಿಂತ ಅವನ ಸಿರಿ ಸಂಪತ್ತು, ವೈಭವ, ಮಹಾತ್ಮೆಗಳೇ ಹೆಚ್ಚು ಜನಜನಿತವಾಗಿವೆ. ಶ್ರೀರಾಮ, ಶ್ರೀಕೃಷ್ಣನಂತೇ ಶ್ರೀನಿವಾಸನೂ ಶ್ರೀವೆಂಕಟೇಶ್ವರನಾಗಿ ಪೂಜೆಗೊಳ್ಳುತ್ತಿರುವನಾದರೂ, ನಿತ್ಯವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಜನರನ್ನು ಆಕರ್ಷಿಸುತ್ತಿರುವ ಜಗತ್ಪ್ರಸಿದ್ಧನು. ಅವನ ಕಲ್ಯಾಣದಲ್ಲಿ ಲೋಕೋತ್ತರವಾದ ಸಾರ್ವಕಾಲಿಕ ಜೀವನ ಮೌಲ್ಯಗಳಿವೆಯೇ ಎಂಬುದನ್ನು ಅಭ್ಯಸಿಸಿ ನೋಡುವ ಪ್ರಯತ್ನಗಳೇಕೆ ನಡೆದಿಲ್ಲ....? ಅವನ ಬಗ್ಗೆ ವಾದ ವಿವಾದಗಳಿಗೂ ಕೊನೆ ಮೊದಲಿಲ್ಲವಲ್ಲ....?


ನೀವು ವೆಂಕಟೇಶ ಪುರಾಣ ಕಥೆ ಓದಿರಬಹುದು. ಶ್ರೀನಿವಾಸ ಕಲ್ಯಾಣ ಸಿನಿಮಾ ನೋಡಿರಬಹುದು. ಆ ದೇವ ದೇವನ ಒಡವೆ ವಜ್ಯವೈಢೂರ್ಯ ಮತ್ತು ಕಲ್ಯಾಣ ವೈಭವ ಕಂಡು ಬೆರಗಾಗಿರಬಹುದು. ಸಂಕಟ ಕಳೆವ ವೆಂಕಟ ರಮಣನವನು, ಅನನ್ಯ ಭಕ್ತಿಭಾವದಿಂದ ಹರಕೆ ಹೊತ್ತರೆ ಸಾಕು, ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವನು ಎಂಬ ನಂಬಿಕೆಯೆ ಬಹಳವಿದೆ. ಅದಕ್ಕೇ ತಿರುಪತಿ ತಿರುಮಲೇಶನ ಪುಣ್ಯಕ್ಷೇತ್ರವಾದ ತಿರುಪತಿಗೆ, ಪ್ರಪಂಚದ ಎಲ್ಲ ಕಡೆಯಿಂದ ಜನ ಬರುತ್ತಾರೆ ಎಂದೇ ತಿಳಿದಿದ್ದೇವಷ್ಟೇ. ಆದರೆ, ಹಾಗೆ ದಿನ ನಿತ್ಯವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿರುವ ಶ್ರೀ ತಿರುಮಲೇಶ ಶ್ರೀನಿವಾಸನ ಕಲ್ಯಾಣ ಕಥೆಯಲ್ಲೇ ಸ್ವಾರಸ್ಯಕರವಾದ ನಿತ್ಯ ಜೀವನಕ್ಕೆ ಹತ್ತಿರವಾದ ತ್ರಿಗುಣಾತ್ಮಕ ತತ್ವವಿದೆ, ಮುಂದುವರೆದ ಅತ್ಯಾಧುನಿಕ ಪ್ರಪಂಚದಲ್ಲೂ ನಮ್ಮನ್ನು ಚಕಿತರನ್ನಾಗಿಸುವ ಹಾಗೂ ವಿಚಾರಪರರನ್ನಾಗಿಸುವ ಚಿಂತನೆಗಳಿವೆ. ಬದುಕಿನಲ್ಲಿ ಅನುಸರಣೆಗೆ ಉಪಯುಕ್ತವಾದ ಜೀವನ ಮೌಲ್ಯಗಳಿವೆ ಎಂಬುದನ್ನು ಯಾರೂ ತಿಳಿಯುವ ಗೋಜಿಗೆ ಹೊಂದಂತಿಲ್ಲ.. ಪ್ರಾಯಶಃ ತಿಳಿಯಲು ಪ್ರಯತ್ನಗಳೇ ನಡೆದಿಲ್ಲವೆನ್ನಿ...


ತಿರುಪತಿ ತಿಮ್ಮಪ್ಪನೆಂದರೇ ದುಡ್ಡಿಗೆ ಕೈ ಚಾಚಿ ನಿಂತ ದೇವರು! ಶ್ರೀಮಂತರಿಗಷ್ಟೇ ದೇವರು! ಹರಕೆ ಹೊತ್ತರೆ ಸಾಕು ನಿಮ್ಮ ಬಯಕೆ ತೀರುತ್ತವೆಂಬುದಷ್ಟೇ ಅಲ್ಲ; ಅವನ ಕಲ್ಯಾಣ ಕಥೆಯಲ್ಲಿ ಒಳ ಹೊಕ್ಕು ನೋಡ ಬನ್ನಿ, ಅದು ನಿಮಗೆ ಕೊಡುವ ಶಾಂತಿ ಸಮಾಧಾನ ನಿಮಗೇ ಆಶ್ಚರ್ಯವೆನಿಸುತ್ತದೆ. ಹಾಗೆ ಮೇಲ್ನೋಟಕ್ಕೆ, ಇದು ನಿರ್ದಯಿ ಪ್ರಪಂಚ ಇಲ್ಲಿ ದುಡ್ಡಿದ್ದರಷ್ಟೇ ಎಲ್ಲವೂ ಎನಿಸುತ್ತದೆ. ನಾವು ಈ ಪ್ರಪಂಚದ ಸರಿಯಾಗಿ ಅರ್ಥಮಾಡಿಕೊಳ್ಳಬೇಕಷ್ಟೇ. ಇಲ್ಲಿ ಏನೆಲ್ಲವನ್ನೂ ಎದುರಿಸುವ ಶಕ್ತಿ ವಾಸ್ತವಿಕತೆ, ವೈಜ್ಞಾನಿಕತೆ ಹಾಗೂ ತಾತ್ವಿಕತೆಯಲ್ಲಿದೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯಲ್ಲೂ ತ್ರಿಗುಣಾತ್ಮಕ ತತ್ವವಿಚಾರವಿದೆ. ಈ ಕಲಿಯುಗಾರಂಭ ಕಾಲದಲ್ಲಿ ನಡೆದ ತಿರುಮಲೇಶ ಶ್ರೀನಿವಾಸನ ಕಲ್ಯಾಣ ಕಥೆಯು ವಿಶಿಷ್ಟ ರೀತಿಯಲ್ಲಿ ಈ ಪ್ರಪಂಚದ ತ್ರಿಗುಣಾತ್ಮಕ ತತ್ವವನ್ನು ನಮ್ಮ ಮುಂದೆ ತೆರೆದಿಡುತ್ತದೆ.



ಇಂದಿನ ಮಾಹಿತಿ ಯುಗದ ವೇಗಗತಿಯನ್ನು ಅದರ ಕೃತ್ರಿಮತೆಯನ್ನೂ ಮೀರಿದ ಅಲೌಕಿಕತೆ ಅಖಂಡತೆಯ ಬ್ರಹ್ಮಸ್ವವೂ, ಹಾಗೂ ವೇದಾಂತದ ಪ್ರಕಾರ

"ತತ್ವಂ ಅಸಿ'' ಅದು ನೀನೆ ಎಂಬುದೂ ವೈಜ್ಞಾನಿಕ ಸತ್ಯವೇ. ಅದು ಸರ್ವಗೋಚರವಾದ ಅಗೋಚರ ಶಕ್ತಿಯೇ, ಆ ಶಕ್ತಿಯೇ ಉಲಿದು ಧ್ವನಿಸಿದಂತೇ ನಿರೂಪಿಸಿರುವ ಹೃದಯ ದೀಪ್ತಿಯಲಿ ನೀವೂ ಒಳಗೊಂಡು ಬರಬೇಕು. ಇದು ವ್ಯವಹಾರಿಕವಾದ ಯಾವುದೋ ದೃಶ್ಯಮಾಧ್ಯಮದ ಸೆಳೆಮಿಂಚಲ್ಲ...! ಆ ವಿಶ್ವಚೇತನವೇ ತಾನಾಗಿ ಅನುರಣಿಸಿದ ಸತ್ಯಸ್ಯಸತ್ಯ!! ನಮ್ಮೊಳಗಣ ಆಂತರ್ಯಕ್ಕೆ ಬೆಳಕು ಕಾಣಿಸುವ ನವನವೋನ್ಮೇಷಶಾಲೀ ಜೀವಪರ ಚಿಂತನ ರಶ್ಮಿ!

(ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚದ ಪೀಠಿಕೆ-ಅವತರಣಿಕೆಯಿಂದ) 

Monday, March 11, 2013

ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ

ಈ ಭೂಗೋಳದಲ್ಲಿ ಮೂರನೇ ಒಂದು ಭಾಗ ಮಾತ್ರ ನಾವು ವಾಸಿಸಲು ಯೋಗ್ಯವಾದ ಭೂಭಾಗವಿದೆ. ಪಂಚಭೂತಗಳಿಂದಾದ ಮನುಷ್ಯನ ಶರೀರವೂ ಎರಡು ಭಾಗ ನೀರು, ಒಂದು ಭಾಗವಷ್ಟೇ ಮೂಳೆ ಮಾಂಸಗಳಿಂದಾಗಿದೆ. ಅಚ್ಚರಿಯೆಂದರೆ, ನಮ್ಮ ಭಾರತ ಭೂ ಪ್ರದೇಶವೂ ಮೂರು ದಿಕ್ಕುಗಳಿಂದ ಸುತ್ತುವರಿದ ನೀರು, ಒಂದೇ ದಿಕ್ಕಿನ ಭೂಭಾಗ ಹೊಂದಿರುವ ಪರ್ಯಾಯ ದ್ವೀಪ. ವಿಶ್ವದ ಯಾವುದೇ ಭೂಭಾಗವೂ ಮೇಲ್ನೂಟಕ್ಕೆ ಸೌಮ್ಯ! ಅಷ್ಟೇ ಒಡಲೊಳಗೆ ರುಧ್ರ ಗಂಭೀರ! ಕೆಲವೇಳೆ ಎಲ್ಲೋ ಭಯಾನಕ ಭೂಕಂಪನ!! ಸುತ್ತುವರಿದ ಸಮುದ್ರವೂ ಅಲೆಗಳೇರಿಳಿತದಲಿ ಸೌಮ್ಯ! ಇದ್ದಕ್ಕಿದ್ದಂತೆ ಬಿರುಗಾಳಿ ಹೊಡೆತ. ಸುನಾಮಿಯ ಅನಾಹುತ! ನಿತ್ಯ ಜೀವನದಲ್ಲಿ ಪ್ರಶಾಂತತೆ!!

ಆದರೇನು! ಆಧುನಿಕತೆಯ ಅಬ್ಬರದಲ್ಲಿ ಪರಿಸರ ಮಾಲಿನ್ಯ, ಶಬ್ದಮಾಲಿನ್ಯ, ಜನವಾಹನಗಳ ದಟ್ಟಣೆ. ಮರಗಳನ್ನು ಕಡಿದಂತೆಲ್ಲ ಅಂತರ್ಜಲ ಇಂಗಿಸುತ್ತಲೆ ಮೆರೆದ ಕಾಂಕ್ರೀಟ್ ರಸ್ತೆಗಳು, ಕಟ್ಟಡಗಳು, ಹೊಲಬುಗೆಟ್ಟ ಗುಂಡಿ ಗಟಾರಗಳು, ಜನಸಂಖ್ಯಾಸ್ಫೋಟದಲಿ ನಿತ್ಯ ಗಲಭೆ ಗದ್ದಲಗಳು. ಏನೀ ಅವ್ಯವಸ್ಥೆಯೋ ಬೇಸರ ತರಿಸುತ್ತದೆ. ಮೇಲೆ ನೋಡೆ ಕಣ್ಣಿಗೆ ರಾಚುವ ಮಹಲುಗಳು, ಕೆಳಗೆ ದಟ್ಟದಾರಿದ್ರ್ಯಕ್ಕೆ ಒಸರುವ ಕಂಬನಿ. ಮಾತನಾಡಿಸಿದರೂ ಕೊಂಕು ನುಡಿವ ನಮ್ಮವರು. ಮಾತಿಲ್ಲದ ಪರಕೀಯರು. ಇವರೆಲ್ಲರ ನಡುವೆಯೆ ಸ್ವಾರ್ಥಿಗಳು, ನಯವಂಚಕರು, ದುಷ್ಟರು ಭ್ರಷ್ಟರು, ಭಯೋತ್ಪಾದಕರು, ಕಳ್ಳಕಾಕರು ಎಲ್ಲೆಲ್ಲೂ ಕೆಟ್ಟದ್ದೇ ಹೆಚ್ಚು ಎದ್ದು ತೋರುತ್ತದೆಯಲ್ಲ...!

ಇಲ್ಲ ಇಲ್ಲ! ಇದು ಸಾತ್ವಿಕ ಸಜ್ಜನರೂ ಸದ್ದುಗದ್ದಲವಿಲ್ಲದೇನೆ ಅವರಷ್ಟಕ್ಕೆ ಅವರು ಇರುವ ಕಾಲ. ಧಾರ್ಮಿಕತೆ ಪ್ರಾಮಾಣಿಕತೆ ಮರೆಯದೇ ಪೂರ್ಣ ಮರೆಯಾಗದಿರುವ ಮಾನವೀಯತೆ ಮತ್ತೆ ಮತ್ತೆ ಮೈದೋರುವ ದೈವಿಕತೆಯ ಕಾಲವೂ ಹೌದಲ್ಲವೇ..!. ಅಂತೆಯೇ ಇವೆಲ್ಲವೂ ಸೇರಿ ಪ್ರಾಕೃತಿಕ-ಭೌತಿಕ ಜೈವಿಕವೂ ಆದ ಈ ಪ್ರಪಂಚವೆಲ್ಲ ತ್ರಿಗುಣಮಯ!! ದಿನಂ ಪ್ರತಿ ವೈಜ್ಞಾನಿಕತೆಯಲ್ಲಿ ಎಷ್ಟೊಂದು ಹಗುರಮಯವೀ ಜೀವಿತಕಾಲ! ಅಷ್ಟೇ ನಿರಾಳ ಉಸಿರೆಳೆಯವಂತಲ್ಲ, ಹಸಿವು ತೀರಿಸಿಕೊಳ್ಳಲು ವಾತಾವರಣದಲ್ಲಿ ಇರಲೇಬೇಕಾದುದೆಲ್ಲ ಆಗುತ್ತಿರುವುದೇ ಮಂಗಮಾಯ!!
ಹದಿನೈದನೇ ಶತಮಾನದಲ್ಲೇ ಹರಿದಾಸರು ಹೇಳಿದರು-“ಪರಮ ಪಾಪಿಗಳಿಗಿದು ಸುಭಿಕ್ಷ ಕಾಲ. ಸತ್ಯವಂತರಿಗಿದು ಕಾಲವಲ್ಲ...” ಅಂದರೆ, ಸತ್ಯವಂತರಿಲ್ಲದ ಪ್ರಪಂಚವೆಲ್ಲಿದ್ದೀತು! ಪ್ರಪಂಚದೆಲ್ಲೆಡೆ ಉಚ್ಚಸಂಸ್ಕೃತಿ ಲಕ್ಷಣಗಳಿರುವಂತೆಯೆ ಅಷ್ಟೇ ಲಜ್ವೆಗೆಟ್ಟ ನೀಚಲಕ್ಷಣಗಳೂ ಕಾಣಸಿಗುತ್ತವೆ. ನಿರ್ದಯಿ ಪ್ರಪಂಚವಿದೆನಿಸುತ್ತದೆ. ಆದಿಯಿಂದ ಮಾನವನ ಸಂಸ್ಕೃತಿ ಪರಂಪರೆಯಲ್ಲಿ ನಮ್ಮ ಭಾರತಕ್ಕೇ ಅದರದೇ ವಿಶಿಷ್ಟ ಸ್ಥಾನ ಮಹತ್ವವಿದೆ. ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲ ಕೆಟ್ಟದ್ದೆಂಬುದೇ ಅಣಕವಾಡುವಂತಿದೆ....
ಇಷ್ಟಕ್ಕೂ ವಿಶ್ವಸೃಷ್ಟಿಯಲಿ ತೃಣಕ್ಕಿಂತ ಕಡೆಯಾದುದಿದೆ. ಅಣವೂ ಇದೆ. ಮಹತ್ತೂ ಇದೆ. ಮಹತ್ಸಾಧನೆಗಳಿವೆ. ಮನುಷ್ಯನಿಗೆ ‘ಮಹತ್ತು’ ಎಂಬುದರಿಂದ ಹುಟ್ಟುತ್ತದೆ ಅಹಂಕಾರ ವ್ಯಾಖ್ಯೆ! ಅಹಂಮಿಕೆಯೇ ಅವನ ಮನಸ್ಸಿನ ಎಲ್ಲ ಕ್ರಿಯೆಗಳಿಗೆ ಮೂಲ. ಅವುಗಳೇ ತ್ರಿಗುಣ ಮಯ. ಸತ್ವ, ರಾಜಸ, ತಾಮಸ ಎಂದು. ಇವು ಮೂರೂ ಗುಣಗಳ ಸಮತೋಲನವು ಈ ಪ್ರಾಕೃತಿಕ ಭೌತಿಕ ಪ್ರಪಂಚದಲ್ಲಿ, ಅವುಗಳೊಂದಿಗೇ ಇದ್ದು ಪ್ರತ್ಯೇಕವೆನಿಸುವ ಸತ್ವಗುಣದ ಹಿರಿಮೆಯಿಂದ. ಸತ್ ಶಕ್ತಿಯಲ್ಲಿ ಸೌಮ್ಯತೆ, ಸ್ಥಿತಪ್ರಜ್ಞೆ ಸಮಸ್ಥಿತಿಯಿಂದ.

ರಜೋಗುಣವೆಂದರೆ ಕೋಪ, ತಾಪ, ಆಕ್ರೋಶ ರೋಷ. ತಮೋಗುಣವೆಂದರೆ ಆಲಸ್ಯ ಅಂಧಕಾರ, ಅಧರ್ಮ, ಹಿಂಸೆ, ವಂಚನೆ, ಕ್ರಾರ್ಯ. ಈ ತ್ರಿಗುಣ - ಸ್ವಭಾವಗಳನ್ನು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸಸ್ಯಗಳಲ್ಲಿ, ಜಲಚರಗಳಲ್ಲಿ ಕಾಣಬಹದಾಗಿದೆ.

-ಹೀಗೆ ಜೈವಿಕಜಗತ್ತಿನ ಜೀವನ ಜಲಧಿಯಲ್ಲಿ ಪ್ರಾಣಿಗಳು ಜಂತುಗಳಲ್ಲಿ, ಮನುಷ್ಯರಲ್ಲಿ ಕೆಟ್ಟದ್ದೆಂಬುದರ ಪ್ರಮಾಣವೇ ಎಲ್ಲಕಾಲಕ್ಕೂ ಎರಡರಷ್ಟು ಗೋಚರಿಸುತ್ತಿರುತ್ತದೆ. ಉಳಿದೊಂದು ಅಂಶವಷ್ಟೇ ಒಳ್ಳೆಯದೆಂಬುದಿರುತ್ತದೆ.

ಆದುದರಿಂದ, ಈ ಎರಡರಷ್ಟು ಜಲಾವೃತ ಜಗತ್ತಿನಲ್ಲಿ, ಒಂದು ಭಾಗವಷ್ಟೇ ಇರುವ ಭೂಭಾಗದಲ್ಲಿ ಮತ್ತೆ ಎರಡು ಭಾಗದಷ್ಟು ರಜೋಗುಣ ತಮೋಗುಣದ ಜನರೇ ಇರುತ್ತಾರೆ. ಅವರಲ್ಲಿ ತಾಮಸಿಗಳಾದವರಲ್ಲಿ ಪರಮಪಾಪಿಗಳೇ ಹೆಚ್ಚಿರುವುದೂ ಕಾಣಸಿಗುತ್ತದೆ. ಹಾಗೂ ಎಲ್ಲ ಕಾಲಕ್ಕೂ ಪಾಪಿಗಳ ಸಂಖ್ಯೆ ಅಧಿಕ ಪ್ರಮಾಣದ ಏರಿಕೆಯಲ್ಲೇ ಇರುತ್ತದೆ.

ಆದರೂ 1/3 ಭಾಗದಷ್ಟು ಸಾತ್ವಿಕ ಸಜ್ಜನರು ಇದ್ದೇ ಇರುತ್ತಾರೆಂಬುದು ಕಂಡುಬರುತ್ತದೆ. ಇದೇ ಪ್ರಾಕೃತಿಕ ನಿಯಮಾನುಸಾರವೂ ಜಗದ ಅಸ್ತಿತ್ವಕ್ಕೆ ಕಾರಣೀಭೂತವಾಗಿಯೂ ಇರುವುದೆಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ಯಾಕೆಂದರೆ, ಯಾವಾಗಲೂ ನೀರಿನ ಅಂಶವು ಹೆಚ್ಚಿದ್ದರೇನೆ ಭೂಭಾಗವು ಹಸನಾಗಿ ಫಲವತ್ತಾಗಿರುವುದು. ಇದು ನಮ್ಮ ಶರೀರಕ್ಕೂ ಅನ್ವಯಿಸುತ್ತದೆ. ಆದರೆ, ಆ ನೀರಿನ ಅಂಶವೇ ಪ್ರಳಯ ಪ್ರಕೋಪಕ್ಕೆ ಹೋಗಬಾರದಲ್ಲ....?

ಅತಿಶಯವೆಂದರೆ, ಇಲ್ಲಿ ಒಬ್ಬ ಸಭ್ಯನಾಗಿ ಸಾತ್ವಿಕನಾದರೆ ಸಾಕು, ತಟ್ಟನೆ ಇಬ್ಬರು ದುಷ್ಟರು ದುರ್ಮಾರ್ಗಿಗಳು ಹುಟ್ಟಿಕೊಳ್ಳುತ್ತಾರೆ. ಹಾಗೆಯೇ, ಒಬ್ಬ ಸಾತ್ವಿಕ ಹಾಗೂ ಸತ್ ಸಾಧಕ ಸತ್ತ ಕ್ಷಣದಲ್ಲೇ ಇನ್ನೊಬ್ಬ ಸಾತ್ವಿಕ ಸಾಧಕ ಮಹಾನುಭಾವನು ಸೂರ್ಯನಂತೆಯೆ ಉದಯಿಸಿ ಬರುತ್ತಾನೆಂಬುದು ತಾತ್ವಿಕವೆನಿಸಿದರೂ ವಾಸ್ತವಿಕ ಸಂಗತಿಯೇ. ಇದು ತ್ರಿಗುಣಾತ್ಮಕ ಪ್ರಪಂಚದ ನಿಗೂಢ ಸತ್ಯವೇ. ಪ್ರಶ್ನಾತೀತವೇ.
ಅಂತೆಯೇ, ಸತ್ವ, ರಜಸ್ಸು, ತಮಸ್ಸು ಈ ತ್ರಿಶಕ್ತಿಗಳು ಅವ್ಯಕ್ತ ಚೇತನದಲ್ಲಿ ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಲ್ಲದೇ ಅಷ್ಟೇ ಸಪ್ರಮಾಣಬದ್ಧ ಸಮತೋಲನದಲ್ಲಿರುತ್ತವೆ. ಅವುಗಳಲ್ಲಿ ಸತ್ ಶಕ್ತಿಯು ಒಂದಂಶವಷ್ಟೇ ಆದರೂ ಅದು ಕ್ಷಯಿಸಿ ಹೋಗಬಾರದು. ಹಾಗಾಗುವುದೆಂದರೆ, ಧರ್ಮವೇ ಕ್ಷಯಿಸಿ ಹೋದಂತೆಯೆ. “ದಿನಂಪ್ರತಿ ಸೂರ್ಯನ ಅಸ್ತಮಾನಕ್ಕೆ ಧರ್ಮವೇ ಕಾರಣ” ಎಂಬುದು ಮಹಾಭಾರತದಲ್ಲಿ ಯಕ್ಷಪ್ರಶ್ನೆಗೆ ಧರ್ಮರಾಜನ ಉತ್ತರ. ಹೌದು, ಸೂರ್ಯ ಅಸ್ತಗಂತನಾಗಿಲ್ಲವೆಂದರೆ ಭೂಮಿ ತನ್ನ ಅಕ್ಷದಲ್ಲಿ ತಿರುಗುವುದನ್ನೇ ನಿಲ್ಲಿಸಿದಂತೇ. ಗ್ರಹಗಳ ಚಲನೆ ನಿಶ್ಚೇಷ್ಟಿತಗೊಂಡಂತೆಯೇ. ಅವುಗಳ ಪರಿಭ್ರಮಣೆಯೆ ತಟಸ್ತವಾದಂತೆಯೆ; ಧರೆಧಗಧಗಿಸುವುದೇ...

"ತ್ರಿಗುಣಾತ್ಮಕ ಪ್ರಪಂಚ"

-ಇದು ನನ್ನ ಇತ್ತೀಚಿನ ಪ್ರಕಟಿತ ಕೃತಿ. ತಿರುಪತಿ ತಿರುಮಲೇಶ ಶ್ರೀ ವೆಂಕಟೇಶ್ವರನ ಬಗ್ಗೆ ಕಳೆದ 15 ವರುಷಗಳಿಂದ ಅಧ್ಯಯನ ನಡೆಸಿ ಇದೀಗ ಮೂರನೆಯ ಬಾರಿಗೆ ಒಂದು ವರೆ ವರ್ಷದಲ್ಲಿ ಸಿದ್ಧಪಡಿಸಿ ಪ್ರಕಟಿಸಿದ ಕೃತಿ ಇದು. ಮೊದಲು “ಸಪ್ತಗಿರಿ ಸಂಪದ” 1997 ರಲ್ಲಿ,
ನಂತರ ಇಂಗ್ಲೀಷ್ ನಲ್ಲಿ-
“The Message from Seven Hills”

ಇನ್ನಷ್ಟು ಸಮಕಾಲೀನ ಮೌಲ್ಯಗಳೊಡನೆ ಇತ್ತೀಚಿನ ಪುನಾರಚನೆಯ ಪ್ರಕಟಣೆಯೇ

“ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ”

ಹೌದು, ಇದು ಆ ಸೃಷ್ಟಿಕರ್ತನ ತ್ರಿಗುಣಾತ್ಮಕ ಪ್ರಪಂಚ!. ತ್ರಿಗುಣಗಳೆಂದರೆ,

ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳು. ಪ್ರಾಕೃತಿಕ, ಭೌತಿಕ ಮತ್ತು ಜೈವಿಕವೂ ಆದ ಸೃಷ್ಟಿಕರ್ತನ ಈ ಪ್ರಪಂಚವೆಲ್ಲ ತ್ರಿಗುಣಮಯ. ಪ್ರಾಕೃತಿಕವಾಗಿ ಭೂ, ಜಲ, ಜೈವಿಕವಾಗಿ ಪ್ರಾಣಿಗಳಲ್ಲಿ ಈ ಮೂರೂ ಗುಣಗಳ ಪ್ರಭಾವ ಪರಿಣಾಮಗಳು ಇರುವುದೇ. ಅವುಗಳಲ್ಲಿ ರಜೋಗುಣ, ತಮೋಗುಣಗಳಿಂದ ಎಲ್ಲ ಕಾಲಕ್ಕೂ ಕೆಟ್ಟದ್ದೇ ಹೆಚ್ಚೆಂದು ತೋರುವ ಸತ್ವಗುಣಗಳಿಂದ ಒಳಿತಿಗೇ ಹಾಗೂ ಸತ್ ಶಕ್ತಿಗೇ ಅತ್ಯಂತ ಮಹತ್ವವಿರುವ ಚಿತ್ರ, ವಿಚಿತ್ರ ಪ್ರಪಂಚವಿದು. ಇಲ್ಲೆಲ್ಲಿದೆ ಸತ್ವಗುಣ, ಸನ್ನಡತೆ ಸತ್ ಶಕ್ತಿಗೆ ಪ್ರಾಧಾನ್ಯತೆ? ದೇವರು, ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ಜ್ಞಾನಸಂಸ್ಕರಣೆ, ಪೂರ್ವಜನ್ಮ, ಪಾಪಪುಣ್ಯ, ಕರ್ಮಫಲ, ಪ್ರಾರಬ್ಧಗಳು ಇವೆಲ್ಲ ಉಂಟೇ...?


ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ತ್ರಿಗುಣಗಳ ಬಗ್ಗೆ ಹೇಳಿದ್ದಾನೆ. ಅದನ್ನು ಕಥಾ ರೂಪದಲ್ಲಿ ಹೇಳುವುದೇ ಶ್ರೀನಿವಾಸ ಕಲ್ಯಾಣ- ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ-


ಜಗತ್ತಿನಲ್ಲಿ ಸಭ್ಯನಾಗಿ, ಸಭ್ಯಗೃಹಸ್ಥನಾಗಿ ಬದುಕುವುದೇ ಮುಖ್ಯವಲ್ಲವೇ...


ಓದಿ  ನೋಡಿ
 ಆಧುನಿಕತೆಯಲ್ಲಿ -ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಈ ಪ್ರಪಂಚದಲ್ಲಿ ಅಚ್ಚರಿ ಎನಿಸುತ್ತ
ನಿಮ್ಮಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಪುಟ ಪುಟಗಳಲ್ಲೂ( 400 ಪುಟಗಳು) ಸತ್ವಗುಣದ ಹಿರಿಮೆ ಗರಿಮೆಯನ್ನೇ ತೋರುವ (ಮೂಲ ಕಥಾ ಸಂವಿಧಾನದಲ್ಲೇ ಪಾತ್ರಗಳ ಸನ್ನಿವೇಶ ಸಂಭಾಷಣೆಯಲ್ಲೇ  ಅಮೂರ್ತವಾಗಿರುವ ಮೌಲ್ಯಗಳನ್ನು ಮೂರ್ತ ಗೊಳಿಸುವ)ದೇವ ದೇವ ಶ್ರೀನಿವಾಸನ ಭವಿಷ್ಯೋತ್ತರ ಪುರಾಣ ಕಥನವೇ


 "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ."  "ಸಪ್ತಗಿರಿ ಸಂಪದ" ಪುನಾರಚನೆಯಲ್ಲಿ....

ನೀವು ಹಿಂದೆಂದೂ ಓದಿರದ ವಾಸ್ತವಿಕವಾಗಿ, ವೈಜ್ಞಾನಿಕವಾಗಿ ಹಾಗೂ ತಾತ್ವಿಕವಾಗಿ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ, ನಿತ್ಯ ನಿರಂತರ ಹೊಸ ಅನುಭವವನ್ನು ನೀಡುವ ಒಂದು ಅಪರೂಪದ ಆಧ್ಯಾತ್ಮಿಕ ಕೃತಿ ಇದು. ವೇಗಗತಿಯಲ್ಲಿ ಮುಂದುವರಿದಿರುವ ಇಂದಿನ ಆಧುನಿಕ ಪ್ರಪಂಚಕ್ಕೆ ಭವಿಷ್ಯೋತ್ತರವಾಗಿ ಹಿಡಿದ ಕೈಗನ್ನಡಿ!